Chapter 1 –
ವೃತ್ತಿ ಜೀವನದ ಕಬಂಧ ಬಾಹುವಿನಲ್ಲಿ ಸಿಲುಕಿ, ಸಮಯದ ಪರಿವೆಯೇ ಇಲ್ಲದೆ,ದೈನಂದಿನ ಕೆಲಸ-ಕಾರ್ಯಗಳಲ್ಲಿ ಮುಳುಗಿ ದಿನ ದೂಡುತ್ತಿದ್ದ ನನಗೆ ಒಂದೊಂದು ದಿನ ಶರಧಿಯ ಕ್ಷಿತಿಜದಂತೆ ಭಾಸವಗುತ್ತಿತ್ತು. ಸಾಗಿದಷ್ಟು ಕೊನೆಯಿಲ್ಲ ! ನಿತ್ಯ ನಿರಂತರ ಪಯಣ.
ಲ್ಯಾಪ್ಟಾಪ್ ಬ್ಯಾಗ್ ಬೆನ್ನಿಗೇರಿಸಿ, ID ಕಾರ್ಡ್ ಕೊರಳಿಗೆ ನೇತಾಡಿಸಿ ಠೀವಿಯಿಂದ ಆಫೀಸ್ ಕಡೆ ದಾಪುಗಾಲು ಹಾಕುವ ಯುವಕ-ಯುವತಿಯರ ಗೋಳು ಅವರವರ ಅಂತರಾತ್ಮಕ್ಕೆ ಮಾತ್ರ ಗೊತ್ತು !! ಬಹುಶಃ ನನ್ನ ಆಫೀಸ್ ಗೆ HR ಗಳನ್ನು ಹೊರತುಪಡಿಸಿ, ಮಿಕ್ಕುಳಿದವರು ನಗುವೆಂಬ ಅಭಿವ್ಯಕ್ತಿಯನ್ನು ಮನೆಯ ತಿಜೋರಿಯಲ್ಲಿ ಭದ್ರವಾಗಿರಿಸಿ, ಮೊರೆಯನ್ನು ಕುಂಬಳಕಾಯಿ ಹಾಗೆ ಊದಿಸಿಕೊಂಡು ಬರುವವರೆ ಹೆಚ್ಚು !!! ಕಾಲೇಜ್ ದಿನಗಳಲ್ಲಿ ಪರೀಕ್ಷೆಯ ಸಮಯದಲ್ಲೇ ಈ ತರಹದ ವಾತಾವರಣ ಕಾಣಸಿಗುವುದು !
ನಗುನಗುತ್ತಾ ದಿನ ದೂಡಬೇಕಾದವರು , ಈ ಕೆಲಸದ ಒತ್ತಡದಲ್ಲಿ ಬೆಂದು, ಹಣ ಸಂಪಾದನೆಯ ಕನಸಿನ ಕುದುರೆಯ ಬೆನ್ನತ್ತಿ ಸಾಗುವಾಗ, ಸಂತೋಷ–ನೆಮ್ಮದಿ-ಆರೋಗ್ಯ ಮುಂತಾದ ಬಹು ಮುಖ್ಯ ಅಂಶಗಳನ್ನು ದಾರಿಮಧ್ಯೆಯೇ ಕಳೆದುಕೊಂಡಿರುತ್ತಾರೆ. ಅಂತ್ಯದಲ್ಲಿ ಇವು ಬೇಕೆಂದರೂ ಮರಳಿ ಪಡೆಯಲಾರದಂತ ಸ್ಥಿತಿ !
ನಾನು ಕೂಡ ಈ ಕಪಿ ಮುಷ್ಟಿಯಲ್ಲಿ ಸಿಲುಕಿ ಎರಡು ಸಂವಸ್ಸರಗಳುರುಳಿವೆ ! ಆ ಕಾಣದ ಕುದುರೆಯ ಬೆನ್ನೆರುವಂತ ಸನ್ನಿವೇಶ ನಮಗೆ ಬಾರದಿರಲಿ !!
“ಕಾರ್ಪೊರೇಟ್ ಲೋಕ ಬರಡಾಗಿದ್ದರೂ, ಇದರಾಚೆಗಿನ ಲೋಕ ಇನ್ನೂಹಚ್ಚ ಹಸುರಾಗಿದೆ”
ಹೈದರಾಬಾದಿನಲ್ಲಿ ನಾನಿನ್ನುರುವುದು ಕೇವಲ ಬೆರಳೆಣಿಕೆಯ ದಿನಗಳಷ್ಟೇ. ಇಲ್ಲಿಂದ ಕಾಲ್ಕೀಳುವ ಮುನ್ನ ಎಲ್ಲಾದರೂ ಪ್ರಯಾಣ ಮಾಡಿ, ಹೊಸ ಊರಿನ ಗಾಳಿಯನ್ನು ಆಸ್ವಾದಿಸಬೇಕೆಂಬ ಯೋಚನೆ ಆಗಾಗ ನನ್ನ ಕೆಣಕಿ ಮಾಯವಾಗುತ್ತಿತ್ತು ! ಆದರೆ ಕೆಲಸದ ಒತ್ತಡದಲ್ಲಿ, ಈ ವಿಚಾರಕ್ಕೆ ನೀರೆರೆದು ಪೋಷಿಸುವಷ್ಟು ಸಮಯವಿರಲಿಲ್ಲ !!
Oh wait ! what did i say ! God. ನಾನೂ ಕೂಡ ನನಗರಿವಿಲ್ಲದಂತೆ ಈ ಹುಚ್ಚು ಕುದುರೆಯ ಸವಾರಿಯನ್ನು ಆರಂಭಿಸಿದ್ದೆನೆಯೇ ?? ಒಂದು ಕ್ಷಣ ಅವಕ್ಕಾದೆ ! ಮಾಡುತ್ತಿದ್ದ ಕೆಲಸವನ್ನು ಅರ್ಧಕ್ಕೆ ನಿಲ್ಲಿಸಿ ವಿನೀತ್ ಗೆ ಫೋನಾಯಿಸಿದೆ !
Chapter 2 –
“Bro..Bike ride chalenge yaar”, ಎಂದು ವಿನೀತ್ ಒಂದೇ ಉಸಿರಿನಲ್ಲಿ ತನ್ನ ಮನದಾಳದ ಮಾತನ್ನು ಹೊರಹಾಕಿದ. ಇನ್ನೇನು ಬೇಕು?
“ರೋಗಿ ಬಯಸಿದ್ದೂ ಚಿಕನ್ 65, ವೈದ್ಯ ಹೇಳಿದ್ದೂ ಚಿಕನ್ 65”
ಈ ಮಾತು ಕೇಳಿ ಮನಸ್ಸು ಬಲೂನ್ ನಂತೆ ಹಿಗ್ಗುತ್ತಾ ಇರಬೇಕಾದ್ರೆ, “ye sab theek hai, tu bata jaana kaha?” ಎಂಬ ಪ್ರಶ್ನೆ ಬ್ರಹ್ಮಾಸ್ತ್ರದಂತೆ ಅಪ್ಪಳಿಸಿತು. ಈ ಒಂದು ಮಾತು ಸಾಕಾಯಿತು ನೋಡಿ, ನನ್ನ ಗಾಳಿ ಗೋಪುರವನ್ನು ಧ್ವಂಸಗೊಳಿಸಿ ನನ್ನನ್ನು ಮರಳಿ ವಾಸ್ತವದ ಕಡೆ ನೂಕಲು ! ಗಮ್ಯ ಸ್ಥಾನದ ಪರಿವೆ ಇಲ್ಲದೆ, ಸವಾರಿಯ ಕನಸು ಕಾಣುತ್ತಿದ್ದ ನಾನೆಂತ ಮೂರ್ಖ !
Actually, ಎಲ್ಲ ಪ್ರಯಾಣದ ಆರಂಭದಲ್ಲಿ ಈ ಒಂದು ಪ್ರಶ್ನೆ ಉಧ್ಭವಿಸುವುದು ಸರ್ವೇಸಮಾನ್ಯ. ಒಂದು ಜವಾಬ್ದಾರಿ ಕೂಡ. ಕನಸು ಕಾಣುತ್ತ ಶಾಂತಚಿತ್ತನಾಗಿದ್ದ ನನಗೆ ಈ ಹೊಸ ಹೊಣೆಗಾರಿಕೆ, ತಲೆಯ ಮೇಲೆ ಮಣಭಾರವಿದ್ದಂತೆ ಗೋಚರಿಸಿತು !
ಹೀಗೆ ತಲೆ ಕೆರೆದುಕೊಂಡು ಯೋಚಿಸುತ್ತಾ ಕುಳಿತಿರುವಾಗ ನನ್ನ ಕಣ್ಣೆದುರು ಬಂದದ್ದು ಕರ್ನಾಟಕ ರಾಜ್ಯದ ಮುಕುಟ ಎಂದು ಕರೆಯಲ್ಪಡುವ, ಹಿಂದೆ ‘ಮೊಹಮ್ಮದಾಬಾದ್’ ಎಂದು ಕರೆಯಲ್ಪಡುತ್ತಿದ್ದ ‘ಬೀದರ್’ ನಗರ ! ತೆಲಂಗಾಣ ಹಾಗು ಮಹಾರಾಷ್ಟ್ರಗಳೊಂದಿಗೆ ಸರಹದ್ದನ್ನು ಹಂಚಿಕೊಂಡಿರುವ ಈ ಜಿಲ್ಲೆ ಕರ್ನಾಟಕದ ಈಶ್ಯಾನ್ಯಕ್ಕೆ ಡೆಕ್ಕನ್ ಪ್ರಸ್ಥಭೂಮಿಯಲ್ಲಿ ಇದೆ. ಬಹಮನಿ ಸುಲ್ತಾನರ ಆಳ್ವಿಕೆಯನ್ನು ಕಂಡದ್ದಲ್ಲದೆ, ಬಸವ ಕಲ್ಯಾಣದಲ್ಲಿ ಉದಯವಾಗಿ ಎಲ್ಲೆಡೆ ಪಸರಿಸಿದ ಶರಣರ ಸಾಂಸ್ಕೃತಿಕ ಕ್ರಾಂತಿಗೂ ಸಾಕ್ಷಿಯಾಗಿದೆ. ಇಂತಹ ಐತಿಹಾಸಿಕ ನಗರವನ್ನು ನೋಡಬೇಕೆಂದು ನಿರ್ಧರಿಸಿ ಗೆಳೆಯನೊಂದಿಗೆ ನನ್ನ ಅಭಿಪ್ರಾಯವನ್ನು ಹಂಚಿಕೊಂಡೆ.
“kyaaaa??? Bidaaar?? Ye kaisa jagah hai bhai?”. ಉತ್ತರ ಭಾರತದಲ್ಲೇ ಹುಟ್ಟಿಬೆಳೆದು ದಕ್ಷಿಣ ಭಾರತದ ಬಗ್ಗೆ ಕೊಂಚವೂ ತಿಳುವಳಿಕೆಯಿಲ್ಲದೆ, ಅಸಡ್ಡೆಯಿಂದ ಈ ರೀತಿ ಕೇಳುವಾಗ, ನಗು ಹೊರಹೊಮ್ಮುತ್ತದೆ ! ಪಾಪ ಹೊಟ್ಟೆಪಾಡಿಗೆಂದು ದಕ್ಷಿಣದ ಮಹಾನಗರಿಗಳಿಗೆ ಗುಳೆ ಹೊರಡುವ ಇವರನ್ನು ಬದಲಾಯಿಸಲು ಹೇಗೆ ಸಾಧ್ಯ !
”ಅಯ್ಯೋ ಬಡಪಾಯಿ, ಅದು ಬಿದಾರ್ ಅಲ್ಲ ಮಾರಾಯ… ಬೀದರ್…its Bidar” ಎಂದು ವ್ಯಂಗ್ಯವಾಗಿ ಅವನ ಪ್ರಶ್ನೆಗೆ ಉತ್ತರಿಸಿದೆ !
Chapter 3 –
ಮುಂಜಾನೆ…ಆಗಷ್ಟೇ ನಿದ್ದೆಯಿಂದ ಮೈ ಕೊಡವಿ ಏಳುತ್ತಿರುವ ಸೂರ್ಯ..ಮೆಲ್ಲನೆ ಸೋಕುತ್ತಿರುವ ತಂಗಾಳಿ.. ‘ಬುಡು ಬುಡು’ ಸದ್ದು ಮಾಡಿಕೊಂಡು ನಮ್ಮನ್ನೋಯುತ್ತಿರುವ ‘ಬುಲೆಟ್’ ಬೈಕು…! A Perfect Combination !
ದಿನ ಪೂರ್ತಿ ಗಣಕ ಯಂತ್ರದ ಮುಂದೆ ಕೂತು ಯಾಂತ್ರಿಕ ಬದುಕಿಗೆ ಒಗ್ಗಿ ಹೋಗಿ, ‘ಮಿನಿ ಕಂಪ್ಯೂಟರ್’ ಆಗುವತ್ತ ಸಾಗುತ್ತಿರುವ ಜೀವನಕ್ಕೊಂದು ಸಣ್ಣ ವಿರಾಮ !
ಸಾಗುವ ದಾರಿ ಅಷ್ಟೇನೂ ದೂರವಿರಲಿಲ್ಲ. ಷಹರಿನ ಟ್ರಾಫಿಕ್ ದಾಟಿ ಮುಂಬೈ-ಹೈದರಾಬಾದ್ ಹೆದ್ದಾರಿ (NH 65) ರಲ್ಲಿ ಸೀದಾ 135km ಸಾಗಿದರೆ ಬೀದರ್ ಸೇರಿಬಿಡಬಹುದು !
ಬೆಳಗ್ಗೆ 6 ಘಂಟೆಗೆ ಹೊರಟ ನಾವು, ತಂಗಾಳಿಯನ್ನು ಆಸ್ವಾದಿಸಿ, ನೆಸರನುದಯವನ್ನು ಕಣ್ತುಂಬಿಕೊಂಡು, ಅವನಿಗೊಂದು ಸಲಾಂ ಹೊಡೆದು ಆಮೆಗತಿಯಲ್ಲಿಸಾಗುತ್ತಿದ್ದೆವು. ನಸುಕಿನ ಆ ನೀರವ ಮೌನದಲ್ಲಿ ,ಬುಲೆಟ್ ನ ಆ ‘ಬುಡು ಬುಡು’ ಸದ್ದು ಎಂತವರ ಮನಸ್ಸಿಗೂ ಮುದ ನೀಡಬಲ್ಲದು. ದೇವಾಲಯದಲ್ಲಿ ನಸುಕಿನ ಪೂಜೆಯ ವೇಳೆ ಬಾರಿಸುವ ಡೋಲಿನ ತರ !
ದಾರಿಮಧ್ಯ ಒಂದು ಚಹಾ ಹೀರಿ, ಪ್ರಯಾಣ ಮುಂದುವರೆಸಿದ ನಾವು ಅಮೆಗತಿಯನ್ನು ಅಷ್ವವೇಗಕ್ಕೆ ಬದಲಾಯಿಸಲಾರಭಿಸಿದೆವು. ತಲುಪಬೇಕಲ್ವ ಮಾರಾಯ್ರೆ ! ಹೀಗೆ ನಿಧಾನ ಸಾಗ್ತಾ ಇದ್ರೆ ಸಂಜೆ ವರೆಗೂ ಬೈಕ್ ಚಲಾಯಿಸಿ ಹೈರಾಣಗುತ್ತಿದ್ದೆವೇನೋ ! ಸೂರ್ಯ ಕೂಡ ತನ್ನ ಮತ್ತೊಂದು ಅವತಾರವನ್ನು ತೋರಿಸಲಾರಭಿಸಿದ್ದ! ಸುಡುಬಿಸಿಲಿನಿಂದ ಧರೆಯನ್ನು ‘ಚುಂಬಿಸಲು’ ಅಣಿಯಾಗಿದ್ದ.
ಶರವೇಗದಲ್ಲಿ ಬೈಕ್ ಚಲಾಯಿಸುತ್ತಿದ್ದ ವಿನೀತ್ ಅದೇನೂ ಕಂಡು ವೇಗವನ್ನು ಕಡಿಮೆ ಮಾಡುತ್ತಾ ಜೋರಾಗಿ ನಗಲಾರಂಭಿಸಿ ನನ್ನ ಗಮನವನ್ನು ಮುಂದೆ ಹೋಗುತ್ತಿದ್ದ ಆಟೋದ ಕಡೆ ಸೆಳೆದ. ಆ ದೃಶ್ಯವನ್ನು ನೋಡಿದ ನನಗೂ ನಗು ತಡೆಯಲಾಗಲಿಲ್ಲ.
ಭರಣಿಯಲ್ಲಿ ಉಪ್ಪಿನಕಾಯಿ ಹಾಕಿದಂತೆ ಜನರನ್ನು ತುರುಕಿಸಿ ಸಾಗುತ್ತಿದ್ದ ಆಟೋದ ಛಾವಣಿಯಲ್ಲಿಒಂದು ಬುರುಡೆ ಹೊರಬಂದಿತ್ತು! ಈ ಗಾಡಿಗೆ ಇವನೇ ‘ಸೈರನ್’ !! ಸುಮ್ಮನಿರುವುದು ಬಿಟ್ಟು, ತಲೆಯನ್ನು ತಿರುಗಿಸುತ್ತಾ ಗಾಳಿಯ ಚುಂಬನವನ್ನು ಆಸ್ವಾದಿಸುತ್ತಾ ಸಾಗುವ ಅವನ ಠೀವಿಯೋ ! car-bus ಗಳಲ್ಲಿ ventilator ಇದ್ದಂತೆ, ಈ ಮೂರ್ಖ ಶಿಖಾಮಣಿ ಆಟೋ ಗೆ ತೂತು ಕೊರೆದಿದ್ದ ! Low Cost Ventilator !!! ನಾವು ಸುಮ್ಮನಿರದೆ ಆಟೋದ ಸಮೀಪದಲ್ಲಿಈ ಮರ್ಕಟ ಮಾನವನನ್ನೇ ನೋಡುತ್ತಾ ಸಾಗುತ್ತಿದ್ದೆವು. (ಒಂದೆರಡು ಫೋಟೋ ಕೂಡ ಕ್ಲಿಕ್ ಮಾಡಿದ್ದೇನೆ !) ಪಾಪ ಪೇಚಿಗೆ ಸಿಲುಕಿದ ಈ ಭೂಪ ಒಂದು ನಗುವನ್ನು ಚೆಲ್ಲಿ ತನ್ನ ಶಿರವನ್ನು ಒಳ ಎಳೆದುಕೊಂಡ. ಆಹಾ… ದೇವರ ಸೃಷ್ಟಿಗೆ ನೂರು ನಮನ !!!!
ನಮ್ಮ ಗಾಡಿ ಮತ್ತೆ ಬೀದರ್ ಕಡೆ ಶರ ವೇಗದಲ್ಲಿ ನುಗ್ಗತೊಡಗಿತು..
Chapter 4 –
ಮೈಲುಗಲ್ಲುಗಳು ಮಿಂಚಿನಂತೆ ಕಂಡು ಮಾಯವಾಗುತ್ತಾ, ಬೀದರ್ ಸನಿಹದಲ್ಲಿದೆ ಅಂತ ಬಿಂಬಿಸುತ್ತಿದ್ದರೂ, ಬಿಸಿಲ ತಾಪಕ್ಕೆ ನಮ್ಮ ಎನರ್ಜಿ ಬರಿದಾಗಿ ಒಣ ಮೀನಿನಂತಾಗಿದ್ದೆವು !! 38 ಡಿಗ್ರಿ ಆಸುಪಾಸು ಮಾರಾಯ್ರೆ ! ಇದನ್ನೆಲ್ಲಾ ಲೆಕ್ಕಿಸದೆ ಬೈಕ್ ಚಲಾಯಿಸುತ್ತಿರುವಾಗ,ತುಸು ದೂರದಲ್ಲಿ ಜೋತುಬಿದ್ದಿದ್ದ ಒಂದು ನಾಮಫಲಕ ನೋಡಿ ಗಾಢ ನಿದ್ರೆಯಲ್ಲಿದ್ದ ನನ್ನ “ಉತ್ಸಾಹ” ಮೈ ಕೊಡವಿ ಎದ್ದು ನನಗೆ ಹೊಸ ಚೈತನ್ಯ ನೀಡಿತು !
—- “Telangana State Limit Ends here”, “ Welcome to Karnataka State” —-
“ಬೀದರ್ ಜಿಲ್ಲೆಗೆ ಸ್ವಾಗತ” – – ಕನ್ನಡ ನಾಮಫಲಕ ನೋಡಿ ತಿಂಗಳುರುಳಿದ್ದವು. ಬೈಕ್ ಪಕ್ಕದಲ್ಲಿ ನಿಲ್ಲಿಸಿ “Bro..Welcome to my State” ಎಂದೆ. ಅದಕ್ಕವನು, “kya likha hai bhai..Jalebi jesa dhikh raha hai” ಅಂತ ನಗುತ್ತ ಹೇಳಿದ. [ಏನ್ಮಾಡೋದು.. ಅವನ ತಪ್ಪಿಲ್ಲ, ದಕ್ಷಿಣದ ಪ್ರತಿಯೊಂದು ಲಿಪಿ ಕೂಡ ಇವರಿಗೆ ಜಿಲೇಬಿ ತರಾನೆ ಕಾಣೋದು] ಇಬ್ಬರೂ ನಗುತ್ತಾ ಮುಂದೆ ಸಾಗಿದೆವು.
ಮನಸ್ಸು ತುಂಬಾ ಪ್ರಶಾಂತವಾಗಿತ್ತು.. ನಮ್ಮ ರಾಜ್ಯ..ನಮ್ಮ ಜನ..ಅನ್ನೋ ಭಾವನೆ.. ಎರಡು ವರ್ಷ ಬೇರೆ ರಾಜ್ಯದಲ್ಲಿದ್ದು,ಕರ್ನಾಟಕ ರಾಜ್ಯದ ಗಡಿ ದಾಟಿದ ಕೂಡಲೇ ಪುಟಿದೆಳುತ್ತೇನೆ..ಕನ್ನಡ ಪದಗಳು ನೋಡಿದ ಕೂಡಲೇ ಮನಸು ಹಗುರಾಗುತ್ತದೆ.. “That’s the power of kannada”
ಯೋಜನೆಯಂತೆ ಮೊದಲು ಹೋಗಿದ್ದು “ಗುರು ನಾನಕ್ ಝಿರ ಗುರುದ್ವಾರ” ಕ್ಕೆ. ಮಿನಿ ಪಂಜಾಬ್ ನಂತೆ ಗೋಚರಿಸುವ ಒಂದು ಸ್ಥಳ. ಎಲ್ಲೆಂದರಲ್ಲಿ ಪಗಡಿ ಕಟ್ಟಿಕೊಂಡು ಕಾಣಸಿಗುವ ಸಿಖ್ ಧರ್ಮೀಯರು. “ಓಹೋ…ಪಾಜೀ..” ಅಂತ ಆದರದಿಂದ ಎದುರುಗೊಳ್ಳುವ ಜನ ! ಮೊದಲ ಸಾರಿ ಗುರುದ್ವಾರಕ್ಕೆ ಬಂದ ಅನುಭವ ! ಆಫೀಸ್ ನಲ್ಲಿ ಆಗೊಮ್ಮೆ ಈಗೊಮ್ಮೆ ಮರೀಚಿಕೆಯಂತೆ ಕಾಣಸಿಗುತ್ತಿದ್ದ ಇವರು, ಈಗ ಸರೋವರದಂತೆ ಕಣ್ಣ ಮುಂದೆ !
ತಲೆಗೊಂದು ವಸ್ತ್ರ ಸುತ್ತಿಕೊಂಡೇ ಒಳ ಹೋಗಬೇಕೆಂದು ಅಲ್ಲಿಯ ನಿಯಮವಾಗಿದ್ದರಿಂದ , ಕರವಸ್ತ್ರವನ್ನು ಸುತ್ತಿಕೊಂಡು ಒಳ ನಡೆದೆವು. ಇನ್ನೂ ಗುರುದ್ವಾರ ಪ್ರವೇಶಿಸಿರಲಿಲ್ಲ, ಅಷ್ಟರಲ್ಲೇ ಒಂದು “ಇಂಪಾದ” ದನಿ ಹಿಂದಿನಿಂದ ಕರೆದಂತಾಯಿತು.
“excuse me, thoda madad kar sakte ho kya?”- ಒಂದು ಸುಂದರವಾದ ಪಂಜಾಬಿ ಯುವತಿ ಬಳಿ ಬಂದು ವಿನಂತಿಸಿದಳು. ನಾವು ಸಹಾಯ ಮಾಡೋದ್ರಲ್ಲಿ ಎತ್ತಿದ ಕೈ. ಅದರಲ್ಲೂ ಒಂದು ಹುಡುಗಿ ವಿನಂತಿ ಮಾಡುವಾಗ ಹೇಗೆ ಬೇಡ ಅಂತ ಹೇಳೋಕಾಗತ್ತೆ ಹೇಳಿ ? ‘ಮಹಾರಾಣಿ’ಯವರ ವಿನಂತಿಗೆ ಸಮ್ಮತಿಸಿ, ರಾಜಭಟರಂತೆ ಅವಳನ್ನು ಹಿಂಬಾಲಿಸಿದೆವು. ಗುರುದ್ವಾರದ ಮುಖ್ಯ ದ್ವಾರದ ಬಳಿ ಕರೆದೊಯ್ದಆಕೆ, ನಮಗೆ ನೀಡಿದ ಕಾಯಕ ನಿಜಕ್ಕೂ ‘ಸ್ಮರಣೀಯ’.
ದ್ವಾರದ ಎದುರಿಗೆ ಕಾಲುಜ್ಜಲು ಹಾಸಿದ್ದ ಉದ್ದವಾದ ಚಾಪೆಯನ್ನು ಕೊಡವಿ, ಪುನಃ ಅದೇ ಜಾಗದಲ್ಲಿ ಹರಡಬೇಕಂತೆ !! ಇದನ್ನು ಮಾಡಲು ನಾವೇ ಸಿಕ್ಕಿದ್ದ ! ಕೆಲಸ ಒಪ್ಪಿಕೊಂಡಾಗಿದೆ, ಮಾಡಲೇ ಬೇಕಲ್ಲಾ!! ಅಯ್ಯೋ ವಿಧಿಯೇ..ನೀನೆಷ್ಟು ಕ್ರೂರಿ ~
ಇಬ್ಬರೂ ಮುಖ ಮುಖ ನೋಡಿಕೊಂಡು, ಇನ್ಯಾವ ಹುಡುಗಿ ಸಹಾಯ ಕೇಳಿದರೂ ಮಾಡಲಾರೆವು ಎಂದು ಸಂಕಲ್ಪ ತೊಟ್ಟು, ಆ ಚಾಪೆಯನ್ನು ಕೊಡವಿ, ಪುನಃ ಅದೇ ಜಾಗದಲ್ಲಿ ಹಾಸಿದೆವು.
“ಥ್ಯಾಂಕ್ಸ್ bhaiyya” ಅಂತ ಹೊರಟೇ ಹೋದಳು ! “bhaiyyaaa” ಗಾಯದ ಮೇಲೆ ಬರೆ !
[ಸಿಕ್ಖರು ತಮ್ಮ ಸೇವಾ ಮನೋಭಾವನೆಗೆ ಹೆಸರುವಾಸಿ. ಜಗತ್ತಿನೆಲ್ಲೆಡೆ ಯಾವುದೇ ಅವಘಡಗಳು ಸಂಭವಿಸಲಿ, ಸಿಕ್ಖರು ಅಲ್ಲಿ ಹಾಜರ್. “ಖಾಲ್ಸ” ಎಂಬ ಸಂಘಟನೆ ಹುಟ್ಟುಕೊಂಡಿದ್ದೇ ಇದೇ ಕಾರಣಕ್ಕೆ]
ಹಾಗೆಯೇ ಗುರುದ್ವಾರಕ್ಕೆ ಯಾರೇ ಹೋದರೂ ತಮ್ಮ ಕೈಲಾದ ಸೇವೆಯನ್ನು ಕೈಗೊಳ್ಳಬೇಕಂತೆ. ಅನಿರೀಕ್ಷಿತವಾಗಿ ನಮಗೂ ಸೇವೆ ಮಾಡುವ ಭಾಗ್ಯ ಒದಗಿ ಬಂತಲ್ಲಾ ಅನ್ನೋ ನೆಮ್ಮದಿ ಒಂದು ಕಡೆ..ಆ ಯುವತಿಯಿಂದ ‘ಭೈಯ್ಯ’ ಅನಿಸಿಕೊಂಡ ನೋವು ಇನ್ನೊಂದೆಡೆ !!!!!
Final Chapter
ತುಸು ಹೊತ್ತು ಗುರುದ್ವಾರದಲ್ಲಿ ವಿಶ್ರಾಂತಿ ಪಡೆದು ಇತಿಹಾಸಿಕ ‘ಬೀದರ್ ಕೋಟೆ’ ಯ ಕಡೆ ಪಯಣ ಬೆಳೆಸಿದೆವು. ಸೂರ್ಯನಾಗಲೇ ನೆತ್ತಿ ಮೇಲೆ ಕುಳಿತು ತಾಂಡವ ನೃತ್ಯ ಆರಂಭಿಸಿದ್ದ.ಬಿಸಿಲು ಹಾಗು ಉತ್ತರ ಕರ್ನಾಟಕ ! ಹೇಳಿಮಾಡಿಸಿದ ಸಂಯೋಜನೆ !!
ರೈಡ್ ಮಾಡುತ್ತಿದ್ದ ವಿನೀತ್ ಯಾವುದೋ ಯೋಚನೆಯಲ್ಲಿ ಮುಳುಗಿ, ಹಾದಿಯಲ್ಲಿದ್ದ HUMP ಗಮನಿಸದೆ ವೇಗವಾಗಿ ಕೊಂಡೊಯ್ದ ರಭಸಕ್ಕೆ, ಬೈಕ್ ಸ್ಟಾಂಡ್ ನ ಸ್ಪ್ರಿಂಗ್ ಬಿದ್ದದ್ದು ನಮ್ಮ ಗಮನಕ್ಕೆ ಬರಲೇ ಇಲ್ಲ. ಗೊತ್ತಾಗಿದ್ದು ‘ಢಣ್- ಢಣ್’ ಸದ್ದು ಬಂದಾಗಲೇ. ಜೋತುಬಿದ್ದ ಸ್ಟಾಂಡ್, ರಸ್ತೆಗೆ ತಾಗಿ ಸದ್ದು ಮಾಡಲಾರಂಭಿಸಿತ್ತು !
“ಸಾರ್…ಸ್ಟಾಂಡ್ ಸಾರ್” ಎಂದು ಎದುರಿಂದ ಬರುತ್ತಿದ್ದ ಬೈಕ್ ಸವಾರ ಚೀರಿದ. “ತುಂಡಾಗಿದೆ ಸಾರ್, ರಿಪೇರಿ ಮಾಡಿಸಬೇಕು. ಗ್ಯಾರೇಜ್ ಎಲ್ಲಿದೆ” ,ಅಂತ ಅವನನ್ನು ತಡೆದು ವಿಚಾರಿಸಿದೆ.
[ ನಮ್ಮ ಯೋಜನೆಯಲ್ಲಿ ಸಣ್ಣ ಬದಲಾವಣೆ. ಅಡಚಣೆಗಾಗಿ ವಿಷಾದಿಸುತ್ತೇನೆ]
ಅವನು ಹೇಳಿದ ಜಾಗ ಹುಡುಕುತ್ತ ಹೊರಟೆವು.ಹಿನ್ನೆಲೆಯಲ್ಲಿ ಬೈಕ್ ನ ‘ಬುಡು-ಬುಡು’ ಸದ್ದಿನ ಜೊತೆ ಸ್ಟಾಂಡ್ ನ ‘ಢಣ್- ಢಣ್’ ಸದ್ದು ! ಮೊದಲೇ ಬಿಸಿಲ ಝಳಕ್ಕೆ ಹೈರಾಣಗಿದ್ದ ನಮಗೆ, ಈ ಸದ್ದು ಮರಣ – ಮೃದಂಗದಂತೆ ಕೇಳತೊಡಗಿತು ! ಸ್ವಲ್ಪ ಮುಂದೆ ಹೋದ ಕೂಡಲೇ ಇನ್ನೊಬ್ಬ, “ಸಾರ್….ಸ್ಟಾಂಡ್ ಸಾರ್…”, ತುಂಬಾ ಕಾಳಜಿಯಿಂದ ಹೇಳಿದ. “ರಿಪೇರಿ ಮಾಡಿಸೋಕೆ ಹೋಗ್ತಾ ಇರೋದ್”, ಕೃತಕ ನಗೆಯಿಂದ ನಾ ಕೂಗಿದೆ . ಆಹಾ… ಏನ್ ಕಾಳಜಿ ಅಂತೀರಾ ! ತನ್ನ ಬೈಕ್ ನ ಟೈಯರ್ ಪನ್ಚರ್ ಆದ್ರೂ ಗೊತ್ತಾಗಲ್ಲ ಇಂತ ಮಹಾಶಯರಿಗೆ, ಎದುರಿನ ಬೈಕ್ ನ ಸ್ಟಾಂಡ್ ಕೆಳಗಿದ್ದರೆ ಇವರ ಜಂಘಾಬಲವೇ ಉಡುಗಿಹೋಗುತ್ತದೆ ! ನಂಬಿ, ಗ್ಯಾರೇಜ್ ತಲುಪುವಷ್ಟರಲ್ಲಿ ಇಪ್ಪತ್ತ್ಕೂ ಹೆಚ್ಚು ‘ಹಿತೈಷಿಗಳು’ ಸಿಕ್ಕಿದ್ದರು. ಎಲ್ಲರದು ಒಂದೇ ರಾಗ..ಒಂದೇ ತಾಳ.. “ಸಾರ್…ಸ್ಟಾಂಡ್ ಸಾರ್”. ಆ ಸ್ಟಾಂಡ್ಗೊಂದು ಸ್ಪ್ರಿಂಗ್ ಸಿಕ್ಕಿಸಿದಾಗಲೇ ಮನಶಾಂತಿ ಮರಳಿ ದೊರಕಿದ್ದು !
ಸವಾರಿ ಮುಂದುವರೆದು, ಕೋಟೆಯ ಜಾಡು ಸಿಗಲಾರಂಭಿಸಿತು. ಬಹುಮನಿ ಮನೆತನದ ಸುಲ್ತಾನ್ ಅಲ್-ಉದ್-ದಿನ್ ಬಹಮನ್ ಗುಲ್ಬರ್ಗಾದಿಂದ ಬೀದರ್ಗೆ ತನ್ನ ರಾಜಧಾನಿಯನ್ನು 1427 ರಲ್ಲಿ ವರ್ಗಾಯಿಸಿಕೊಂಡು ಮತ್ತು ಈ ಕೋಟೆಯನ್ನೂ ಇತರೆ ಇಸ್ಲಾಮಿಕ್ ಸ್ಮಾರಕಗಳನ್ನೂ ಕಟ್ಟಿಸಿದನಂತೆ. ಚೌಕೊನಾಕಾರದಲ್ಲಿರುವ ಈ ಕೋಟೆ 0.75 ಮೈಲಿ (1.21 km) ಉದ್ದ ಮತ್ತು 0.5 ಮೈಲಿ (0.80 km)ಅಗಲವಾಗಿದೆ. ಕೆಲವು ಪಾರ್ಶ್ವಗಳು ಅಜಾಗುರಕತೆಯಿಂದ ಹಾಳಾಗಿದ್ದರೂ, ಕೋಟೆಯ ಆಕರ್ಷಣೆಯೇನೂ ಕುಂದಿಲ್ಲ ! ಬೀದರ್ ಕೋಟೆಯನ್ನು ದಾಟುವ ಮೊದಲು ಮೂರು ಹಂತದ ನೀರಿನ ಕಂದಕವನ್ನು ದಾಟಿಕೊಂಡು ಬರಬೇಕಾಗುತ್ತದೆ. ಈ ಕಂದಕಗಳು ಈಗ ಬರಿದಾಗಿದ್ದರೂ, ನೀರಿನ ಜಾಡುಈಗಲೂ ಕಾಣಸಿಗುತ್ತದೆ.
ಏಳು ದ್ವಾರಗಳನ್ನು ಹೊಂದಿರುವ ಈ ಕೋಟೆಯ ಮುಖ್ಯ ದ್ವಾರವನ್ನು ಪರ್ಷಿಯನ್ ವಾಸ್ತುಶಿಲ್ಪದ ಮಾದರಿಯಲ್ಲಿ ಕಟ್ಟಲಾಗಿದೆ. ‘ಶೇರ್ಜ ದರ್ವಾಜಾ’ ಎಂಬ ದ್ವಾರದ ಹೊರ ಕವಚದಲ್ಲಿ ಎರಡು ಹುಲಿಗಳನ್ನು ಕೆತ್ತಲಾಗಿದೆ. ಶಿಯಾ ಸಮುದಾಯದ ನಂಬಿಕೆಯ ಪ್ರಕಾರ ಹುಲಿಯು ವಿಜಯದ ಸಂಕೇತವಾಗಿದೆ.ಈ ಹುಲಿಗಳ ಲಾಂಛನವು ಕೋಟೆಯನ್ನು ಶತ್ರುಗಳ ದಾಳಿಯಿಂದ ರಕ್ಷಿಸುತ್ತದೆ ಎಂದು ನಂಬಲಾಗಿತ್ತಂತೆ !
ಬೀದರ ಕೋಟೆಯೋಳಗಿರುವ ಅನೇಕ ಅರಮನೆ ಸಮೂಹಗಳಲ್ಲಿ ಮುಖ್ಯವಾದಾದ್ದು ‘ತಖ್ತ್ ಮಹಲ್’. ತಖ್ತ್ ಮಹಲ್ ಅರಮನೆಯನ್ನು ಬಹಮನಿ ಸುಲ್ತಾನನಾದ ‘ಅಹಮದ್ ಷಾ ಬಹಮನಿ’ 1426-1432 ಅವಧಿಯಲ್ಲಿ ನಡುವೆ ನಿರ್ಮಿಸಿದನಂತೆ. ಈ ಮಹಲ್ ಬೀದರ್ ಕೋಟೆಯ ಪಶ್ಚಿಮ ಭಾಗದಲ್ಲಿ ನೆಲೆಸಿದೆ. ಈ ಅರಮನೆಯ ಪ್ರಾಂಗಣವನ್ನು ಆಡಳಿತಗಾರರು ಖಾಸಗಿ ದರ್ಬಾರ್ ಮತ್ತು ಚರ್ಚೆಗಳಿಗಾಗಿ ವ್ಯಾಪಕವಾಗಿ ಬಳಸುತ್ತಿದ್ದರಂತೆ. ಕಟ್ಟಡದ ರಚನೆಯು ಸಂಕೀರ್ಣ ವಾಸ್ತುಶೈಲಿಯದ್ದಾಗಿದೆ. ಬಹಮನಿ ಸುಲ್ತಾನರ ಬೀದರ್ ಸಾಮ್ರಾಜ್ಯದ ಅನುಸ್ಥಾಪನ ಸೇರಿದಂತೆ ಅನೇಕ ಐತಿಹಾಸಿಕ ಘಟನೆಗಳು ಇಲ್ಲಿ ನಡೆದಿವೆ. ಪ್ರಸ್ತುತ ಕಾಲದಲ್ಲಿ ಬೀದರ್ ಕೋಟೆಯ ಕಮಾನುಗಳು ಮಾತ್ರ ಸುಸ್ಥಿತಿಯಲ್ಲಿವೆ.
ಕೋಟೆಯ ಹಲವು ಭಾಗ ವಿನಾಶದ ಅಂಚಿನಲ್ಲಿದೆ. ಪುರಾತತ್ವ ಇಲಾಖೆಯ ಕಚೇರಿ ಕೋಟೆಯ ಒಳ ಭಾಗದಲ್ಲಿದ್ದರೂ ಅಳಿವಿನಂಚಿನಲ್ಲಿರುವ ಕೋಟೆಯ ನವೀಕರಣದ ಕಾಮಗಾರಿ ನಡೆದ ಯಾವುದೇ ಗುರುತುಗಳಿಲ್ಲ ! ಇಲಾಖೆಯು ಇದೇ ರೀತಿ ನಿರ್ಲಕ್ಷ ತೋರಿದರೆ, ನಮ್ಮ ತೆಕ್ಕೆಯಲ್ಲಿರುವ ಒಂದು ಅಪರೂಪದ ರತ್ನ ಕೈ ಜಾರಿ ಹೋಗಬಹುದಾದ ಸನ್ನಿವೇಶ ಎದುರಾಗಬಹುದು. ಇದು ಬರೀ ಇಲಾಖೆಯ ಜವಾಬ್ದಾರಿಯಲ್ಲ. ಅಳಿವಿನಂಚಿನಲ್ಲಿರುವ ಇತಿಹಾಸಿಕ ಕಟ್ಟಡಗಳನ್ನು ಕಾಪಾಡುವುದು ನಮ್ಮ ನಿಮ್ಮೆಲ್ಲರ ಕರ್ತವ್ಯ !
ಹೊತ್ತು ಮುಳುಗುವ ಮುಂಚೆ ಹೈದರಾಬಾದ್ ತಲುಪುವುದು ಅನಿವಾರ್ಯವಾಗಿದ್ದರಿಂದ, ಬೀದರ್ ನ ಪ್ರತಿಯೊಂದು ನೆನಪುಗಳನ್ನು ಮೆಲುಕು ಹಾಕುತ್ತ, ಕೋಟೆಗೊಂದು ಸಲಾಂ ಹೊಡೆದು ಹೊರಡಲು ಅಣಿಯಾದೆವು. ಬೈಕ್ ನ ಸದ್ದು ಕೋಟೆಗೆ ಅಪ್ಪಳಿಸಿ, ಪ್ರತಿದ್ವನಿಸಿತು ! ಕೋಟೆಯು ನಮ್ಮನ್ನು ಬೀಳ್ಕೊಡುತ್ತಿರುವಂತೆ !
By, Karthik Gowda.